ನಮ್ಮನ್ನು ಹುಡುಕಿ, ನಮ್ಮೊಡನೊಂದಾಗಲು ಬರುತಿದ್ದವಳು ನೀನು,
ಅರೆದಾರಿ ಬಂದವಳು, ಮರಳುವುದು ಸರಿಯೆ?
ಬಾಗಿಲನು ಬಡಿದವಳು, ಬಂದ ದಾರಿಗೆ ಸುಂಕವಿಲ್ಲೆಂದು,
ಬಂದ ದಾರಿಯ ಹಿಡಿದು, ದೂರವಾಗುವುದು ಸರಿಯೆ?
ಯಾವ ಕೃತ್ಯದಿ, ನಿನ್ನುತ್ಸಾಹದ ದೀಪ ನಂದಿಸಿದೆವೋ ನಾವು,
ಯಾವ ಲೋಪದಿ, ನಿನ್ನೆತ್ತರಕ್ಕಪಚಾರ ಬಗೆದೆವೋ ನಾವು,
ಈ ಪರಿ ನೊಂದು, ಮುನಿದು, ನಮ್ಮ ಕೈ ಬಿಡುವುದೆ ನೀನು?
ನಮ್ಮಾಶೆ, ಕನಸುಗಳ ಹಿಚುಕಿ, ಜೀವ ಕೊಯ್ಯುವುದೇನು ಚೆನ್ನು?
ಹೇಗಿನ್ನು, ನಿನ್ನ ಹೊರತು, ದೂರದ ಹಾದಿ ನಡೆಯುವುದು ಸಾಧ್ಯ?
ಮಧುರ ಭಾವಗಳ ತರುವವಳು, ಬರೆ ನೆನಪಾಗುವುದಸಾಧ್ಯ.
ಪುಣ್ಯ ಗಂಗವತರಣಿಯಾಗಿ, ನಮ್ಮತ್ತ ದುಮುಕುತಿದ್ದ ನಿನ್ನ,
ಅದಾವ ದೈತ್ಯಗೋಡೆ, ನಮ್ಮಿಂದ ತಡೆಹಿಡಿಯುತ್ತಿದೆ ಹೀಗೆ?
ಹೊತ್ತಾರೆಯ ಹೊಂಗಿರಣಗಳ ರಾಶಿ ಹೊತ್ತು ತರುತ್ತಿದ್ದ ನಿನ್ನ,
ಅದಾವ ಕಾರ್ಗತ್ತಲ ಭೂತ, ಹಿಡಿದು ನುಂಗುತ್ತಿದೆಯೋ ಹೀಗೆ?
ನಿನ್ನ ಸುಸ್ವಾಗತಕ್ಕೆಂದು ಕಟ್ಟಿದ್ದ, ಭಾವ ಬಣ್ಣಗಳ ಕಮಾನು,
ನಿರಾಶೆಯ ನಿರ್ವರ್ಣದಿ ಬಿಳಿಚಿ, ಕೆಳಗುರುಳಲಿದೆ ಬೇಗ;
ನಿನ್ನಾಗಮನಕ್ಕೆಂದು ಗುಡಿಸಿ, ಸಾರಿಸಿ, ಸಿದ್ಧಪಡಿಸಿದ್ದ ದಾರಿ,
ನಿನ್ನ ನಿರಾಗಮನದ ಹತಾಶೆುಂದ, ಪಾಳು ಬೀಳಲಿದೆ ಆಗ;
ಕೊಟ್ಟ ಭರವಸೆಗೆ ಭಂಗ ಬರದಂತೆ, ನೀನು ಬಂದರೆನೆ ಚೆನ್ನ,
ಆಗಲೆ, ನಿನ್ನ ನಮ್ಮ ಜೀವನಕ್ಕೊಂದರ್ಥ, ಚೆಲುವು, ಬಣ್ಣ.
ಬತ್ತಿದ ಹೃದಯದಲ್ಲಿ, ಆಶೆಯ ಒರತೆ ಹಿಂಗಿಲ್ಲ ಇನ್ನೂ,
ಮನಸ್ಸು ಬದಲಿಸಿ, ಮತ್ತೆ ನಮ್ಮತ್ತ ಮರಳುವೆಯೆಂದು,
ಕಣ್ಣಲ್ಲಿ ಎಣ್ಣೆುಟ್ಟು, ಕಾಯುವೆವು ನಿನ್ನಾಗಮನದ ಸಂಜ್ಞೆಯನ್ನು;
ಇದು ಬೇಕುಬೇಡಗಳ ನಿರ್ಧಾರಗಳ ದುಂದು ವಿಲಾಸದ ಕಾಲವಲ್ಲ,
ನಿನ್ನ ನಿರಾಗಮನದ ನೋವನ್ನು ಸಹಿಸುವ ಶಕ್ತಿ ನಮ್ಮಲ್ಲಿ ಬಹಳವಿಲ್ಲ;
ನಂದುತ್ತಿರುವ ನಮ್ಮ ಜೀವದ ದೀಪಕ್ಕೆ, ಎಣ್ಣೆ ಗಾಳಿಯಾಗಿ ಬಾ,
ಹೊಸಬೆಳಕು, ಹುರುಪು, ಹರ್ಷ, ಸ್ನೇಹಗಳ, ರಾಶಿರಾಶಿ ತಾ;
ನೀ ಬಂದರೆ ನಾಕ, ಬರದಿದ್ದರೆ ತಳವಿಲ್ಲದ ನರಕವೀ ಲೋಕ;
ಬಾಚಿ ಹಿಡಿಯಲು ಚಾಚಿರುವ, ನಮ್ಮ ಬಾಹುಗಳ ಮಧ್ಯೆ,
ಎಲ್ಲಿದ್ದರಲ್ಲಿಂದ ಓಡೋಡಿ, ಪ್ರೀತಿಯ ಹಡಗೇರಿ ಬಾ.
ನೀನು ಬರಲೆ ಬೇಕು, ಬರದೆ ನಮಗೆ ಗತ್ಯಂತರವಿಲ್ಲ,
ನೀನು ಚುಕ್ಕಾಣಿ ಹಿಡಿದು ನಡೆಸದ ವಿನಹ, ನಮ್ಮ ಪಯಣ ಮುಂದುವರಿಯುವುದಿಲ್ಲ;
ಸಿದ್ಧ ಸನ್ನದ್ಧ ಜೀವನ ನಕ್ಷಗೆ ಹೊರತಾಗಿ, ನೀನು ನಡೆಯುವುದು ಸರಿಯಲ್ಲ,
ನಡುನೀರಿನಲ್ಲಿ ಹೀಗೆ ನಮ್ಮ ಕೈ ಬಿಡುವುದು ನಿನಗೆ ಧರ್ಮವಲ್ಲ;
ನೀನು ನಮ್ಮವಳು, ಬೆಸುಗೆ, ನಮ್ಮುಸಿರಿನಲ್ಲಿ ಬೆರೆತ ಉಸಿರು,
ನಮ್ಮ ಜೀವದ ಜೀವ, ನಮ್ಮ ಜೀವನ ಸಂತೃಪ್ತಿಯ ಹಸಿರು ನಿಶಾನೆ,
ಯಾರೋ ಹೊರಗಿನವರಂತೆ, ನೀನು ಸಿಡಿದು ನಿಂತರೆ, ನಮ್ಮ ಗತಿಯೇನು?
ಇದು ಆತ್ಮ ಆತ್ಮಗಳ ಮಧುರ ಸೌಹಾರ್ದತೆಯ, ನಿನ್ನ ಮಿತಿಯೇನು?
ನಮ್ಮನ್ನು ಹರಿದು ಹಂಚಿ, ನೀ ಹೀಗೆ ದೂರ ಸರಿಯಬೇಡ,
ನಿನ್ನಲ್ಲೆ ನಮ್ಮೆಲ್ಲ ಭರವಸೆಯಿಟ್ಟ, ನಮ್ಮನ್ನುಳಿಸಲೆಂದೆ ಬೇಗ ಬಾ.
This poem has not been translated into any other language yet.
I would like to translate this poem