ಸಮಾನತೆ Poem by Praveen Kumar in Bhavana

ಸಮಾನತೆ

ಎಲ್ಲರು ನಿನ್ನವರೆ, ನಿನ್ನ ಮಣ್ಣಿನ ಕುಡಿಗಳು
ನಿನ್ನ ಗಾಳಿ ನೀರು ಹೀರಿ ಅರಳುವ ಬಿಡಿ ಹೂಗಳು,
ಮತ್ತೆ ನಿನ್ನ ಮಡಿಲು ಸೇರಿ ನಿನ್ನಲ್ಲೆ ಬೆರೆವರು;
ನಿನ್ನ ಭಿನ್ನ ಅಂಗಗಳು, ನಿನ್ನ ಹೃದಯ ಬಳ್ಳಿಗಳು,
ಯಾಕೆ ನಿನಗೆ ಭೇದ ಭಾವ ನಿನ್ನ ಸ್ವಂತ ಮಕ್ಕಳಲ್ಲಿ,
ಒಂದೆ ಕೈಯ ಬೆರಳು ಬಗ್ಗೆ ಯಾಕೆ ದಿವ್ಯ ಅಂತರ?
ಯಾಕೆ ನಿನ್ನ ಸಾರ ಸರ್ವಸ್ವ ಕೆಲವೆ ವರ್ಗಗಳಿಗೆ ಮಾತ್ರ,
ಹಸಿವು, ನೋವು, ಕೊರತೆ ಮತ್ತೆ ನೋಡು ಹಲವು ಜನರಿಗೆ;
ನಿನ್ನ ಮೊಲೆಹಾಲಿನಲ್ಲಿ ಸಮಾನ ಗುಣವಿಲ್ಲವೇಕೆ?
ನಿನ್ನ ಪ್ರೀತಿ ದೀಪದಲ್ಲಿ ಬೆಳಕು ನೆರಳು ಭೇದವೇಕೆ?
ಮಾನವತೆಯ ಸಾರದಲ್ಲಿ ಯಾವ ವಿದ್ಯುತ್ತು ಪ್ರವಾಹದಿಂದ
ಒಡಕು ಮೂಡಿ, ನಗು ಅಳು ಧ್ರುವೀಕರಣಗೊಂಡಿದೆ?

ಕಣ್ಣೀರು ಹಿಂಗಿ, ರಕ್ತತೊಳೆದು ಹಿಡಿ ಅನ್ನ ಪಡೆವರು,
ದೇಹಮಾರಿ, ಕರುಳು ಹರಿದು ಹೊಟ್ಟೆಪಾಡು ಮರೆವರು,
ಚಿಂದಿಬಟ್ಟೆ, ಸ್ವಸ್ಥಾನವಿಲ್ಲ. ಇವರು ನಿನ್ನ ಮಕ್ಕಳು;
ನೂರನಿಟ್ಟು ಲಕ್ಷಪಡೆದು ವೃಕ್ಷದಂತೆ ಬೆಳೆಯುವ
ಕೊಂಬೆ ಕೊಂಬೆ ರೆಂಬೆಯಲ್ಲಿ ಐಷಾರಾಮ ಹರಿಸುವ
ಸಂಪತ್ತಿನಲ್ಲಿ ಹೂತುನಿಂತ ಭೋಗಿಗಳೂ ಮಕ್ಕಳು;
ಇವರಿಗಿರುವ ಯಾವ ಹಿರಿಮೆ ಅವರ ಹೀಗೆ ತುಳಿದಿದೆ?
ಯಾವ ದಿವ್ಯ ಬೇಲಿ ಅವರ ಕೂಡದಂತೆ ಧ್ರುವೀಕರಿಸಿದೆ?

ನೋಡು ಇಲ್ಲಿ, ಧೂಳಿನಲ್ಲಿ ನರಳುತ್ತಿರುವ ಹಸುಳೆಗಳು,
ಹೊಟ್ಟೆಗಿಲ್ಲ, ಬಟ್ಟೆಗಿಲ್ಲ, ನೆರಳಿಗೊಂದು ಗುಡಿಸಲಿಲ್ಲ;
ಅಲ್ಲಿ, ತಿಂದು ತೇಗಿ ಬೆಳೆವ ದಷ್ಟಪುಷ್ಟ ಮೊಸಳೆಗಳು,
ಇರುವ ಸಿರಿಯನೆಲ್ಲಿ ಇಡುವುದೆಂಬ ಚಿಂತೆ ಅವರಲಿ;
ಅವರಿಗಿಷ್ಟು ಇವರು ಕೊಟ್ಟು, ಇವರಿಗಷ್ಟು ಅವರು ಕೊಟ್ಟು
ಎಲ್ಲ ಕೂಡಿ ಬೆರೆತರೆನೆ ನಿನ್ನ ಮಣ್ಣು ಚೆನ್ನ, ಚಿನ್ನ,
ಇಲ್ಲದಾಗ ನೋವು, ದಂಗೆ, ನಷ್ಟ, ಕಷ್ಟ ಅಶಾಂತಿಯು.

ಎಲ್ಲ ಕೂಡಿ ಹಂಚಿ ತಿಂದು ನಗುವ ದಿನ ತೃಪ್ತ ದಿನ,
ಐಶ್ವರ್ಯ ಕೆಲವು, ಹಸಿವು ಹಲವು, ಹೇಗೆ ಶಾಂತಿ ತರುವುದು?
ನೆರೆಹೊರೆ ಉರಿಯುವಾಗ, ಆರಾಮ ನಿದ್ರೆ ಸಹಜವೆ?
ನೋವು, ಆಳು, ಕ್ಷಾಮ ಮಧ್ಯೆ ಸಮೃದ್ಧ ಬಾಳು ಸಾಧ್ಯವೆ?

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success