ಬನ್ನಿರೆಲ್ಲ ಎಚ್ಚೆತ್ತು ಜನರೆ, ಎದೆಯನೆತ್ತಿ ಮುಂದೆ ಬನ್ನಿ,
ಸ್ವಂತ ಬುದ್ಧಿ ಒಳಗೆ ತಿಕ್ಕಿ, ಸತ್ಯ ನ್ಯಾಯ ಬೆಂಕಿ ಧರಿಸಿ,
ಲಕ್ಷಲಕ್ಷ ಸಂಖ್ಯೆಯಲ್ಲಿ, ಗುಂಪು ಗುಂಪಿನಲ್ಲಿ ಬನ್ನಿ,
ರಂಗಮಂಚದ ಮಧ್ಯೆ ಬನ್ನಿ, ರಣರಂಗದ ನಡುವೆ ಬನ್ನಿ,
ಸ್ವಾರ್ಥ ಸುಖವ ಹಿಂದೆ ಬಿಟ್ಟು, ಸತ್ಯ ನ್ಯಾಯದ ಕವಚ ತೊಟ್ಟು,
ಅನೀತಿಯೆದುರು ರೊಚ್ಚಿಗೆದ್ದು, ಹೋರಾಟವನ್ನು ಮನದಲ್ಲಿಟ್ಟು,
ನ್ಯಾಯಧರ್ಮಸಾಮ್ರಾಜ್ಯಕ್ಕಾಗಿ, ಪ್ರಾಣತ್ಯಾಗಕ್ಕಾಗಿ ಬನ್ನಿ,
ದಿಕ್ಕು ದಿಕ್ಕಿನಿಂದ ಬನ್ನಿ, ಪಾಶ್ರ್ವಕೋಶದಿಂದ ಸಿಡಿದು,
ಹತಾಶೆ, ಕನಸು ಮಾತು ಮರೆತು, ನೇರ ಚರ್ಯೆಗೆ ಕೂಡಿ ಬನ್ನಿ,
ನಾನು ನೀನು ತಕರಾರು ಬಿಟ್ಟು, ನಾನು ನಾನು ಎಂದು ಬನ್ನಿ.
ಪ್ರಜಾಪ್ರಭುತ್ವ ಹೆಸರಿನಿಂದ, ಹಣ ಜನದ ಶಕ್ತಿುಂದ
ನ್ಯಾಯ ನೀತಿಯ ಹೊಟ್ಟೆ ಸೀಳಿ, ಬಡಜನರ ರಕ್ತ ಹೀರಿ,
ದೇಶವನ್ನು ಕೊಳ್ಳೆಹೊಡೆದು ಕೊಬ್ಬಿದಂತ ಮೊಸಳೆ ಹಿಂಡು,
ಲಂಚಕೊಟ್ಟು ಲಂಚಪಡೆದು ಲಂಚ ಪ್ರಪಂಚ ಕಟ್ಟಿಕೊಂಡು
ಹಣದಿ ಜೀವನ ಅಳೆಯುವಂತ ಅನೀತಿ ಅಧರ್ಮ ನಾವು ಕಂಡು
ಎಷ್ಟು ಕಾಲ ಕಣ್ಣು ಮುಚ್ಚಿ ಅನ್ಯಾಯ ಸಹಿಸಿ ಇರಲು ಸಾಧ್ಯ?
ಮೋಸ ಸಂಚು ಹಣಬಲ ಅಧಿಕಾರದೇಣಿಯಾಗುವಲ್ಲಿ
ನ್ಯಾಯನ್ಯಾಯ ಧರ್ಮಧರ್ಮ ತಾರತಮ್ಯ ಇರಲಸಾಧ್ಯ;
ದುಷ್ಟವರ್ತುಲ ಬಿಡಿಸಲೆಂದು ಭ್ರಷ್ಟ ಜನರ ಕಳಗಿಳಿಸಲೆಂದು
ಹೊಸವ್ಯವಸ್ಥೆ ಕಟ್ಟಲೆಂದು, ಹಳೆಯದನ್ನು ಒಡೆಯೆ ಬನ್ನಿ.
ರಕ್ತ ಕುಡಿದು ಉಬ್ಬಿದಂತ ದುಷ್ಟಜನರ ಹೊಟ್ಟೆ ಬಗಿಯೆ,
ವಿನಯ ಸಭ್ಯತೆ ಹಿಂದೆ ಬಿಟ್ಟು, ಕಾಳಿ ರೂಪ ತಳೆದು ಬನ್ನಿ,
ಅನೀತಿ ಅಧರ್ಮದ ಕೋಟೆಕಟ್ಟಿ ಸ್ವಚ್ಛಂದ ಬಾಳು ಬದುಕುವಂತ,
ನೀಚ ಅಧಮರ ಬಿಗಿದು ಕಟ್ಟಿ, ಜನ ನ್ಯಾಯಾಲಯಕೆ ತನ್ನಿ;
ರಕ್ತಕೊಟ್ಟು, ರಕ್ತ ಹರಿಸಿ ಲೋಕವನ್ನು ಶುದ್ಧೀಕರಿಸಿ,
ದುಷ್ಟರಾಗಿ ದುಷ್ಟತನವ ದುಷ್ಟರಿಂದ ದೂರೀಕರಿಸಿ,
ಅನ್ಯಾಯ ಅಸತ್ಯ ಕ್ರೂರವೆಂಬ ಸತ್ಯವನ್ನು ಮುಖಕೆ ಹಿಡಿದು
ದುಷ್ಟ ಜನರ ಬಗ್ಗು ಬಡಿಯೆ, ಹಬ್ಬುತ್ತಿರುವ ಅರ್ಬುದಕ್ಕೆ
ಶಸ್ತ್ರ ಹಿಡಿದ ವೈದ್ಯರಾಗಿ, ಕಟಿಬದ್ಧರಾಗಿ ಬನ್ನಿ,
ದಯೆ ದಾಕ್ಷಿಣ್ಯ ದೂರವಿಟ್ಟು ಹಿಂಸೆ ರೂಪ ತಾಳಿ ಬನ್ನಿ.
ದುಷ್ಟ ವ್ಯವಸ್ಥೆಯ ಬೇರು ಕಿತ್ತು, ಶಿಷ್ಟ ವ್ಯವಸ್ಥೆಯ ಅಲ್ಲಿ ಇಟ್ಟು,
ಮುಂದೆ ಬರುವ ನಮ್ಮ ಪೀಳಿಗೆ, ನಮ್ಮ ದೇಶ, ನಮ್ಮ ಜನರ
ವಿನಾಶದಿಂದ ಉಳಿಸಲೆಂದು, ಎಲ್ಲ ತ್ಯಜಿಸಿ ಮುಂದೆ ಬನ್ನಿ;
ನಾವು ನೀವು ಕೂಡಿ ಬರಲು, ನ್ಯಾಯ ಶಕ್ತಿ ನಮ್ಮಲ್ಲಿರಲು
ಮುಂಜಾವಿನೆದುರು ಇರುಳು ಸರಿದು, ದಿಕ್ಕು ದಿಕ್ಕು ಚದರುವಂತೆ
ದುಷ್ಟ ಲೋಕ ಕಾಲು ಮುರಿದು ತನ್ನಿಂದ ತಾನೆ ಉರುಳಲಿಹುದು;
ಕಣ್ಣು ಮುಚ್ಚಿ ಒಳಗೆ ಹೊಕ್ಕು, ನಿಮ್ಮಾಂತರ್ಯ ಬಿಚ್ಚಿನೋಡಿ,
ಅನ್ಯಾಯ ಅನೀತಿಗೆ ತಲೆಯಬಾಗಿ, ಕಾಡಿಬೇಡಿ ಬದುಕಬೇಡಿ,
ದಿಟ್ಟತನದಿ ಬದುಕುವಂತ, ಹೆಮ್ಮೆುಂದ ಉಸಿರಾಡುವಂತ
ನ್ಯಾಯ ಧರ್ಮ ಸಾಮ್ರಾಜ್ಯಕ್ಕಾಗಿ ಬಲಿದಾನವಾಗೆ ಬನ್ನಿ.
ಚುನಾವಣೆ, ಪೊಲೀಸ್ಠಾಣೆ, ನ್ಯಾಯಸ್ಥಾನ, ಬಂಧಿಖಾನೆ
ಅನೀತಿ ದುಷ್ಟ ವ್ಯವಸ್ಥೆಗೊಂದು ಆಧಾರ, ಕೋಲು, ಕಾಲು ಕಂಭ,
ಚಂದ್ರನೆಂದು ಕನ್ನಡಿಯ ಹಿಡಿವ ಸಾಂತ್ವಾನದ ಕಾರಭಾರ,
ಕೊಳ್ಳೆ ಹೊಡೆದು ಒಳ್ಳೆ ಜನರ ಒಳ್ಳೆತನಕೆ ಬರೆಯನೆಳೆವ
ನ್ಯಾಯದಾಸೆ ತೋರಿ ಸುಲಿವ, ಕಟ್ಟಿ ಹಿಡಿವ ಕಪಟ ತಂತ್ರ;
ದುಷ್ಟ ಚಕ್ರವ್ಯೂಹದಲ್ಲಿ ಅಧರ್ಮ ಅನೀತಿಯೊಂದೆ ದಾರಿ;
ನ್ಯಾಯ ನೀತಿ ಬದುಕು ಬೇಕೆ, ಹೋರಾಟವೊಂದೆ ಉಳಿದ ದಾರಿ,
ಅಡ್ಡದಾರಿ ಹಿಡಿದು ಬನ್ನಿ ಅಥವಾ ಹೋರಾಡಲೆಂದೆ ಬನ್ನಿ,
ನ್ಯಾಯ ನೀತಿ ಸತ್ಯ ಧರ್ಮ ಹೇಡಿ ಜನರ ಸೊತ್ತು ಅಲ್ಲ,
ನಿಮ್ಮ ಒಳಗಿನ ಶಕ್ತಿುಂದ ನ್ಯಾಯಶಕ್ತಿಗಳಿಸೆ ಬನ್ನಿ.
This poem has not been translated into any other language yet.
I would like to translate this poem