ಕುದುರೆಯನೇರಿ
ಕಡಿವಾಣ ಕಡೆಗೆಣಿಸಿದರೆ ಹೇಗೆ?
ಸಾಗರವ ಸೇರಿ
ಜಂಘಬಲ ಜಡತವಾದರೆ ಹೇಗೆ?
ಹೋರಾಟಕ್ಕೆ ಹೊರಟಲ್ಲಿ
ಬಲಾಬಲಗಳ ಬೆಂಗಾವಲಿಟ್ಟು
ಜಿದ್ದನ್ನು ಗೆದ್ದು ಬರಬೇಕು,
ಹಿಡಿತ ತಪ್ಪಿದರೆ ಜೀವ
ಮುಡುಗಿ ಬಾಡುವುದು ಸತ್ಯ.
ಉಕ್ಕೇರಿ ಬರುವ ತೆರೆತುದಿಯಲ್ಲಿ
ಮೇಲೇರಿ ಬಂದು
ಕೆಳಗಿಳಿವಾಗ ಜಾರಿ ಮತ್ತೆ
ಮೇಲೇರುವ ಹಿಡಿತ
ತಪ್ಪಿದರೆ ನೀರೆ ಗತಿ;
ಕಾಲಗತಿಯಲ್ಲಿ ಏರಿಳಿದು ನಡೆವ
ಸಂಯಮವೆ ಜೀವನ,
ಹತೋಟಿ ಮೀರಿದ ಪ್ರವಾಹ
ವಿಶಾಲ ಸಾಗರದ ಪಾಲು.
ನೀರು ಮಿತಿಯಲ್ಲಿಟ್ಟು
ಹೊನ್ನ ಹೊಳೆ ಹರಸಬಹುದು,
ಮೀರಿಯೇರುವ ನೀರಿನಲ್ಲಿ
ಜೀವಧ್ವಂಸಗೊಳ್ಳುವುದು;
ಭೌತಭೌತಿಕ ಶಕ್ತಿ
ನಡೆಸಿದರೆ ನಡೆಯುವುದು,
ನಡೆದರೆ ನಡೆಸುವುದು
ಲಗ್ಗುಲಗಾಮನು ಮರೆತು
ವಿನಾಶಪ್ರಳಯದ ಕಡೆಗೆ.
This poem has not been translated into any other language yet.
I would like to translate this poem