ತ್ರಿಶಂಕು ನಾನು Poem by PRAVEEN KUMAR Kannada Poems

ತ್ರಿಶಂಕು ನಾನು

ತ್ರಿಶಂಕು ನಾನು


ಇದು ಸೋಲುಗೆಲುವಿನ ಕತೆಯಲ್ಲ,
ಆತ್ಮದಾಳದ ಕಾಲಾತೀತ ವ್ಯಥೆ;
ಇದು ಏಳುಬೀಳಿನ ಆಘಾತವಲ್ಲ,
ಜನ್ಮಜನ್ಮದನುಷಂಗ ಪ್ರಘಾತ.

ನಾನಾದರೋ ಇದ್ದುದನ್ನೆಲ್ಲ ಕೊಟ್ಟೆ,
ನಾವೆಯ ಹುಟ್ಟನ್ನು ಪ್ರಾರಬ್ಧಕ್ಕೆ ಬಿಟ್ಟೆ;
ಬಿರುಗಾಳಿ ಸುಳಿಗಾಳಿ ತೆರೆಗೆ ಮೈಕೊಟ್ಟು
ಬೇಕಿದ್ದಲ್ಲಿ ಕೊಂಡೊಯ್ಯೆಂದು ಕೂತುಬಿಟ್ಟೆ.

ತೆರೆಯ ಮೇಲೆ ತೆರೆ, ಆಘಾತಗಳು,
ಬಿರುಗಾಳಿ ಸುಳಿಗಾಳಿ ಸುಯ್ದಾಟಗಳು,
ಕುಳಿತ ತಳ ತಿರುತಿರುಗಿದ ಹೊಯ್ದಾಟ,
ಇದ್ದ ನಾವೆಯೋ ತಲೆಕೆಳಗಾದ ಉತ್ಪಾತ.

ಬಿರುಕು ಮುಚ್ಚಲು ನಾನು ಮಾಡದುದಿಲ್ಲ,
ಹರಿದಲ್ಲೆಲ್ಲ ಹಾಕದ ತೇಪೆ ಯಿಲ್ಲ,
ಕಣ್ಣಲ್ಲಿ ಕಣ್ಣಿಟ್ಟು, ಮನಸಲ್ಲಿ ಮನಸಿಟ್ಟು,
ದಿನರಾತ್ರಿ ಎಚ್ಚರಿಕೆಯ ವೃತಹಿಡಿದು ಕುಳಿತೆ.

ಒಂದೂ ಫಲಿಸಲಿಲ್ಲ, ಫಲನೀಡಲಿಲ್ಲ,
ಮಾಡಿದ್ದೆಲ್ಲ ನೀರಮೇಲಣ ಹೋಮವಾಯಿತಲ್ಲ,
ಬಾಗಿಲವರೆಗೆ ಬಂದು, ಅಲ್ಲೆ ಕುಸಿಯುವ ರೀತಿ,
ಎಲ್ಲೋ ತಪ್ಪಿದೆ ಇಲ್ಲಿ ಕಾರ್ಯಕಾರಣದ ಕೊಂಡಿ.

ನನ್ನ ಲಕ್ಷ್ಯವೇನೂ ನನಗೆ ತಿಳಿಯದುದಲ್ಲ,
ನನ್ನಂಗೈಯ ಬುಗರಿ, ನನ್ನೆದೆಯ ಹಿತ ಮಿಡಿತ;
ಧ್ರುವಗಳೊಂದಾದಾಗ ತಾಳ ತಪ್ಪುತ್ತದೆ ಯಾಕೆ,
ಕಿಡಿಗಳು, ಬೆಂಕಿ ಸುಡು ಸುಡು ಹಾರುತ್ತವೆ ಯಾಕೆ?

ನನಗಾಗಿ ತುಡಿಯುತ್ತಿದೆಯೆಂದು ಗೊತ್ತು,
ಬಳಿಗೊತ್ತಿ ಕೈಹಿಡಿದು ಸಾವರಿಸುವೆನೆಂದರೆ,
ಯಾಕೀ ಚಡಪಡಿಕೆ, ದ್ವಂದ್ವ, ಹೋರಾಟ,
ಅಡಿಮೇಲು, ಅಲ್ಲೋಲಕಲ್ಲೋಲ, ಹಾರಾಟ?

ಹಿಂದೆ ಸರಿಯುವ ಹಾಗೂ ಇಲ್ಲ,
ಕಾಣದ ಕೊಂಡಿ ಕಡಿದರೆ ತ್ಯಾಗಬಲಿ ಶತಸಿಧ್ಧ;
ತ್ರಿಶಂಕು ನಾನು, ಅತ್ತ ದರಿ, ಇತ್ತ ಪುಲಿ
ಬೆಳೆದು ಬಂದ ಬಂಧ ಬಿಟ್ಟು ಬಿಡುವಂತಹದಲ್ಲ.

ಇದು ಅಂತಿಂತಹದಲ್ಲ, ಸಾಧಾರಣವಲ್ಲ,
ಹಲವು ಕಾಲ ಲೋಕಗಳ ದಾಟಿಬಂದ ಬಂಧ,
ವಿಶ್ವಾಂತರವ ದಾಟಿ ಮತ್ತೆ ಕೂಡುವಾಗ
ಕಾಣದ ಕ್ಲೇಶ ಕ್ಷೋಭೆ ಸೃಷ್ಠಿ ನಿಯಮವೋ ಏನೋ?

ಇಂದಲ್ಲ ನಾಳೆ ಸ್ಠೃ ಶ್ರುತಿಸೇರುವುದು,
ಈ ಬಂಧ ಸಂಬಂಧ ಸಂಗೀತವಾಗುವುದು;
ಹಡಗು ಹಿಡಿತಕೆ ಬಂದು ದಡವನು ಸೇರಿ
ಸುಯ್ದಾಟ, ಹೊಯ್ದಾಟ ಹೊಸಲೋಕ ತೋರುವುದು.

ಕ್ಷಿತಿಜದ ಕೊನೆಯಲ್ಲಿ ಕಾಣುವ ಕಿರಣಪುಂಜ
ಇಂದಿನ ಕ್ಲೇಶ ಕ್ಷೋಭೆಗೆ ಹೊಸ ಅರ್ಥ ನೀಡುವುದು,
ವಿಶ್ವಾಂತರ ದಾಟಿ ಸಾಗಿದ ಗುಹ್ಯ ದಾರಿ
ಕಾದಿರುವ ಹೊಸಜೀವನಕೆ ಹೊಸಶಕ್ತಿ ನೀಡುವುದು.

ನನಗಾಗಿ ತುಡಿಯುತ್ತ ಕಾದಿರುವ ಜೀವ,
ತುಳಿದ ದಾರಿಯ ಬಳಲಿಕೆಯಿಂದ ಬಿಸುಟ
ಕಲ್ಲುಮುಳ್ಳುಗಳ ದಾರಿ ಬೇಕಾದ್ಟ್ಡರಲಿ,
ನನ್ನೊಲವು ದ್ಟೃ ದಾರಿಮೀರಿ ಶ್ರುತಿಸೇರುವತ್ತ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success