ಮಾರ್ಚ್ 22 Poem by PRAVEEN KUMAR Kannada Poems

ಮಾರ್ಚ್ 22

ನನ್ನ ಸಂದೇಶ ನಿನ್ನ ತಲಪಿದುದು ನೆನಪಿದೆಯೆ ನಿನಗೆ?
ಒಂದಲ್ಲ, ಎರಡಲ್ಲ, ಮೂರು ಮೂರು ಬಾರಿ ನಿನ್ನ ಬಳಿಗೆ
ನನ್ನಾತ್ಮವ ತೆರೆದು, ಹೃದಯವ ಬಸೆದು, ಹೊರ ತೆರೆದಿಟ್ಟ
ಒಳ ಜಂಜಾಟ, ನೋವು, ಆಶೆನಿರಾಶೆಗಳ ದಟ್ಟ ಧಿಟ್ಟ
ಪುಟಗಳ ಬಿಟ್ಟ ನನ್ನಂತರಂಗದ ನವಿರು ಸ್ಥರಗಳ ಹೊಲಬು
ನಿನ್ನ ನೆನಪಿನಂಗಳದಿಂದ ಜಾರುವುದೆ, ಇದು ನನ್ನ ಹಲುಬು.

ಅಳುಕು ಉಳುಕುಗಳೆಲ್ಲವ ತೊರೆದು, ಹಿಂದೆ ಮುಂದೆ ಮರೆತು,
ನಿನ್ನ ನನ್ನ ಸಂಬಂಧದ ಮೊರೆತ ತೊಡಿಕೊಂಡಿದ್ದೆ ಮೊದಲು;
ಎಲ್ಲ ತಿಳಿದವಳಂತೆ ಬೀಗಿ, ಮೌನಸಮ್ಮತಿಯಿಂದ ಪರಿಗ್ರಹಿಸಿ,
ನಿನ್ನನ್ನೆ ಇಹಪರ ಕೂಡಿ, ಧಾರೆಯೆರೆದು ಕೊಟ್ಟಿದ್ದೆ ನನಗೆ,
ಕಟ್ಟಿಟ್ಟದ್ದನ್ನು ಬಿಚ್ಚಿ ತೆರೆದು, ಕಣ್ಣೆದುರಿನಲ್ಲೆ ನನಗಾಗಿಟ್ಟಿದ್ದೆ,
ನಾನಂತೂ ಪ್ರತಿಕ್ಷಣ ಸ್ವರ್ಗಸುಖ ಹೀರಿ, ಆ ಸೌಂಧರ್ಯಾಗ್ರಾಹಿಸಿದ್ದೆ.

ಕಾಲ ಕಾಲು ಕೆರೆದು, ನಿನ್ನ ನನ್ನ ನಮ್ಮಿಂದ ಮರೆಮಾಚಿದಾಗ,
ಮತ್ತೊಮ್ಮೆ ನನ್ನ ಪರಿ ತುಂಬಿ ತೋಡಿಕೊಂಡಿದ್ದೆ ನಿನಗೆ -
ಬಂದದನ್ನೆಲ್ಲ ಬಾಚಿ ಹಿಡಿದು, ಹೊಸಹೊಸ ರೂಪ ಕಡೆದು,
ಮುಂದೆ ಮುಂದೆ ಮುನ್ನಡಿಯಿಡುಯೆಂದು ಶುಭ ಕೋರಿದ್ದೆ;
ಒಂದಲ್ಲ ಒಂದು ದಿನ ಅನಾಗತ ಕಾಲದಸ್ಪಷ್ಟ ಸುಳಿಯಲ್ಲಿ
ತಿಳಿಯದ ತಿರುವುಗಳಲ್ಲಿ ಮತ್ತೆ ಕೂಡುವೆವೆಂದು ಧೈರ್ಯ ತುಂಬಿದ್ದೆ.

ಕಾಲ ಕೂಡಿಬರಲಿಲ್ಲ, ನಿನ್ನನನ್ನಾಶೆ ಕೈಕೂಡಲಿಲ್ಲ,
ನಿನ್ನೆಲ್ಲವನು ನನಗೆಂದು ಮುಡಿಪಿಟ್ಟು, ದಿನನೂಕುವುದ ತಿಳಿದು,
ನಾನೆಂದೂ ನಿನ್ನವನೆಂದು, ನನ್ನಾತ್ಮ ಹೃದಯವ ಬಸೆದು
ಮತ್ತೊಮ್ಮೆ ನಿನಗರ್ಪಿಸಿಕೊಂಡಿದ್ದೆ, ನನ್ನದ್ದೆಲ್ಲ ನಿನಗೆ ಧಾರೆಯೆರೆದಿದ್ದೆ;
ಸಂದೇಶ ತಲಪಿದುದೆ ತಡ, ಹಾರಿಹೋಯಿತು ಹಕ್ಕಿ ನನ್ನಿಂದ ದೂರ,
ಇದ್ದೊಂದಾಸರೆಯೂ ಕ್ಯೈತಪ್ಪಿ, ಕುರುಡಾಯಿತು ನನ್ನ ಲೋಕ.

ಎಲ್ಲಿ ತಪ್ಪಿದೆ ನಾನು, ಯಾಕೆ ನಿನ್ನನನ್ನ ಕೊಂಡಿ ಕಳಚಿತೆಂದು
ದಿನರಾತ್ರಿ ಮುಗಿಲು ದಿಟ್ಟಿಸುವುದೊಂದೆ ನನಗುಳಿದ ದಾರಿ;
ನಿನ್ನ ನೋವಿನಾಳ ಗೊತ್ತು ನನಗೆ, ನನ್ನದು ಗೊತ್ತು ನಿನಗೆ,
ಅಡೆತಡೆ, ಕಾಲದ ಗೋಡೆ ನಿನ್ನನನ್ನ ಬೆಸುಗೆ ಬಿರಿಯದೆಂದು,
ಇಂದಲ್ಲ ನಾಳೆ, ಮತ್ತೊಂದು ಕಾಲ ನಾವೊಂದಾಗುವೆವೆಂದೂ ಗೊತ್ತು,
ಆದರೂ, ನಿನ್ನ ಕುರಿತ ದಿಗಿಲು ದುಗುಡದಲ್ಲಿ ಹಣ್ಣಾಗುತ್ತಿರುವೆ ನಾನು.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success