ಇಲ್ಲಿಂದ ಅಲ್ಲಿವರೆಗೆ, ಆಚೆ ಏನು ತಿಳಿದುದಿಲ್ಲ,
ಏನೋ ಒಂದು ಗಾಳಿ ಜಿಗತ,
ನೀರಿನಲ್ಲಿ ತೆರೆಯ ಮೊರೆತ,
ಎಲ್ಲಿಂದ ಬಂದು ಎಲ್ಲಿಗೆಂದು ಹೇಳುವವರು ಎಲ್ಲೂ ಇಲ್ಲ;
ಇದೊಂದು ಕುರುಡು ಮೂಕ ಜಾತ್ರೆ,
ಕತ್ತಲಲ್ಲಿ ಜೀಗುಡುವ ನಾವೆಲ್ಲರಿಲ್ಲಿ ಮಿಣುಕು ಹುಳ.
ಜೀವ ಜಿಗಿದು ಮೇಲೇಳುವಾಗ,
ರಾಗ, ಚೆಲುವು, ಮಳೆ ಬಿಲ್ಲು ಆಗಿ
ನಾನೆಂಬ ಕ್ಷಣಿಕ ಗಾಳಿಗುಳ್ಳೆ
ಮೇಲೆದ್ದು ಬರುವುದೆ ಜೀವನ;
ಪ್ರಜ್ಞೆಯೆಂಬ ಬೆಳಕಿನಿಂದ ಭಾವವೆಂಬ ಬಣ್ಣ ಹಬ್ಬಿ
ಮೂಡುವುದೆ ಜೀವನ.
ಕತ್ತಲಲ್ಲಿ ಬೆಳಕು ಮೂಡಿ,
ಬೆಳಕು ಕತ್ತಲನ್ನು ಕೂಡಿ
ಮೂಡುವುದು ಚೇತನ;
ರಾಗ, ದ್ವೇಶ, ಭಾವ ಹುಟ್ಟಿ,
ಭಾವ ಜೀವವನ್ನು ಕಟ್ಟಿ
ಮೂಡಿಸುವುದು ಜೀವನ.
ವಿಕಸನದ ಸ್ತಬ್ಧ ಚಿತ್ರ,
ಬ್ರಹ್ಮಾಂಡದ ಸ್ಥೂಲ ಬೀಜ,
ಕಾಲ ನೆಲದ ಕೂಟ ಆಟ;
ಭಾವ, ಚೆಲುವು, ಪ್ರಜ್ಞೆ, ಒಲವು, ಸ್ಥ್ಯೆರ್ಯ, ವಿಶ್ವಾಸ ಕ್ರಿಯೆಯು
ಬೀಜ, ವೃಕ್ಷ, ಹೂವು, ಫಲವು, ಸತ್ಯ, ಮಿಥ್ಯ ಲೀಲೆಯು;
ಸೇರಿ ಬಿಡಿಸಿ ಹಿಡಿಯುವ ಕರ್ಮ ರಣರಂಗವು.
ಉರಿದು ಬೆಳಕು ಹಬ್ಬುವಂತ ಶ್ರೀದೀಪ ಜೀವನ,
ಇದು ಸುಪ್ತಶಕ್ತಿ ಉದ್ದೀಪಿಸುವ ದಿವ್ಯ ನಮ್ರ ಚೇತನ,
ವಿಜ್ಞಾನವೆಂಬ ಕಟಕಟೆಗೆ ಮೀರಿ ನಿಂತ ನಿರ್ಣಯ,
ಒಳಗಿನಿಂದ ಅರಿಯುವಂತ ಭಾವಪೂರ್ಣ ಪ್ರಜ್ಞೆಯು,
ಗಂಟಿನೊಳಗಿನ ಗಂಟಿನಲ್ಲಿ ನಿಂತ ಮುಕ್ತದ್ವಾರವು,
ಮೂಕ ಗಾನ ಜೀವನ, ರುದ್ರ ತಾಂಡವ ನೃತ್ಯವು.
This poem has not been translated into any other language yet.
I would like to translate this poem