ನಾನು ಹುಳವು, ನಾನು ಕಪಿಯು,
ವಿಕಾಸಗೊಂಡ ಜೀವವು;
ನಾನು ಭ್ರೂಣ, ನಾನು ಪ್ರಾಣ,
ಬೆಳವಣಿಗೆಯ ಸೂತ್ರವು.
ಮೆಟ್ಟಿಲನ್ನು ಮೆಟ್ಟಿಮೆಟ್ಟಿ ಮೇಲೆಮೇಲೆ ನಡೆಯಬೇಕು,
ಒಂದೆ ಹೆಜ್ಜೆಯಲ್ಲಿ ಸ್ವರ್ಗ ಸೃಷ್ಠಿಯಲ್ಲಿ ಎಲ್ಲೂ ಇಲ್ಲ;
ಕಲ್ಲುಕಲ್ಲು ಕಟ್ಟಿಮಾತ್ರ ರಾಜಮಹಲು ಬರಲು ಸಾಧ್ಯ,
ದಿನದಿನ ಉಂಡುಮಾತ್ರ ದೇಹಮನಸಿನ ಬಲಿಕೆ ಸಾಧ್ಯ,
ಮಾಯಮಂತ್ರದಂತೆ ಕ್ಷಣದಿ ದೇಶಗೆಲುವ ಹುಚ್ಚು ಸಲ್ಲ;
ಇಲ್ಲಿ ಎಲ್ಲ ಹತ್ತಿ ಹತ್ತಿ ಮರದ ತುದಿಯನೇರಬೇಕು,
ಹುಡುಕಿಹುಡುಕಿ ಹಣ್ಣುಕಿತ್ತು ಶ್ರಮದ ಫಲ ತಿನ್ನಬೇಕು,
ಉಚಿತ ಊಟ ಎಲ್ಲೂ ಇಲ್ಲ, ಅಡ್ಡ ದಾರಿಗೆ ಬೆಲೆಯೆ ಇಲ್ಲ;
ಕದ್ದುಗೆದ್ದವ ತುಂಬಕಾಲ ತನ್ನ ಲೂಟಿಯ ತಿನ್ನಲಾರ,
ಮೋಸಕಪಟ ತೋರಿದಾತ ತಾನೇ ಹಣೆದ ಬಲೆಯ ಒಳಗೆ
ಸಿಕ್ಕಿ ತೊಯ್ಯತೊಯ್ಯ ಉಡುಗಿ ತನ್ನ ಹೊಂಡಕ್ಕಿಳಿಯುತ್ತಾನೆ;
ಕ್ಷಣದ ಕ್ಷುದ್ರ ಲಾಭದಿಂದ ಸ್ಥಿರಸುಖದ ಸ್ವತ್ತುಬರದು,
ಶ್ರಮದ ಪ್ರೌಢತೆ ಬರುವತನಕ ಸಾಧನೆಯ ಸುಳಿವೆ ಇರದು;
ಹೆಜ್ಜೆಹೆಜ್ಜೆ ನಡೆದ ಮೇಲೆ ಸಜ್ಜೆಸುಖದ ತೃಪ್ತಿಯುಂಟು,
ಸೃಷ್ಠಿಕ್ರಿಯೆಯಲ್ಲಿ ಇದು ಮೂಡಿಬಂದ ಮೊದಲ ಪಾಠ.
ಬಾಲ್ಯವೊಂದು ಹಸುರುಲೋಕ,
ಬೆಳವಣಿಗೆಯ ಸನ್ನಹ;
ಪ್ರೌಢತೆಯ ಚಕ್ರವ್ಯೂಹಕೆ
ಸಜ್ಜುಗೊಳಿಸುವ ವಿಧಾನವು.
ಶೂನ್ಯಶೂನ್ಯ ಗುಣಿಸಿದಾಗ ಶೂನ್ಯಮಾತ್ರ ಬರಲು ಸಾಧ್ಯ,
ಯತ್ನಯತ್ನ ಗುಣಿಸಿದಾಗ ರತ್ನ ಮೂಡಿಬರುವುದುಂಟು;
ಸೊನ್ನೆ ಬೆಣ್ಣೆಕೊಡುವುದಿಲ್ಲ, ಬೆಣ್ಣೆಯಿರದೆ ತುಪ್ಪಬರದು,
ಒಂದರಿಂದ ಹತ್ತು ಬಂದು, ನೂರುಕೋಟಿಗೇರಬಹುದು,
ಇದು ಸೃಷ್ಟಿಯ ಮಾದರಿ, ಲೋಕವಿಕಸನ ನಕ್ಷೆಯು;
ಗಿಡವ ನೆಟ್ಟು ಬೆಳೆಸಿದರೆ ಹೂವುಹಣ್ಣು ಹುಟ್ಟಬಹುದು,
ಶ್ರಮಮರೆತ ಮೈಗಳ್ಳ ಎಷ್ಟುದೂರ ನಡೆಯಬಹುದು?
ತೊದಲುನುಡಿಯೆ ಮುಂಬರುವ ಕವಿಕಾವ್ಯದ ಮಹಾದ್ವಾರ;
ಮೊದಲ ಹೆಜ್ಜೆಯಿಂದ ಮಾತ್ರ ಮುಂದೆಮುಂದೆ ನಡೆಯಬಹುದು,
ಸಜ್ಜುಗೊಂಡು ಮುಂದೆನಡೆದರೆ ಅಸಾಧ್ಯವೆಂಬ ಅಳುಕೆಯಿಲ್ಲ,
ಸಿದ್ಧನಿದ್ದರೆ ಎಲ್ಲ ಸಾಧ್ಯ, ಬದ್ಧನಾದರೆ ಯಶಸ್ಸು ಸಿದ್ಧ;
ಸೃಷ್ಠಿನಕ್ಷೆಯ ಗುಟ್ಟನ್ನರಿತು ನಮ್ಮದಾರಿ ನಡೆಯಬೇಕು,
ಹೆಜ್ಜೆಹೆಜ್ಜೆಗೆ ತೊಡರಿಬರುವ ಅಡ್ಡಿಯಾತಂಕ ಬಳ್ಳಿಗಳನು
ತೊಡೆದುನಡೆಯಲು ಸಜ್ಜುಗೊಂಡು ಮುಂದೆಮುಂದೆ ಹೆಜ್ಜೆಯಿಟ್ಟರೆ
ನಾವು ಸೃಷ್ಠಿ ಬೇರೆಯಲ್ಲ, ನಮ್ಮ ದಾರಿಗೆ ತೊಡಕೆಯಿಲ್ಲ.
This poem has not been translated into any other language yet.
I would like to translate this poem